ಎಸ್.ಎಸ್.ಕಂಬೈನ್ಸ್ ಲಾಂಛನದಲ್ಲಿ ದಿನೇಶ್ಗಾಂಧಿ ನಿರ್ಮಿಸುತ್ತಿರುವ ನಾಲ್ಕನೇ ಚಿತ್ರ ‘ಛತ್ರಪತಿ ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಅವರು ಬರೆದಿರುವ ‘ಮಣ್ಣನ್ನು ತಿಂದಿಯಾ ಯಾಕೋ ಕೃಷ್ಣ ಬೆಳಗಾಂ ಕರದಂಟು ಬೇಡವೇ ಎಂಬ ಹಾಡಿನ ಚಿತ್ರೀಕರಣ ರಾಮೋಜಿ ಫ಼ಿಲಂಸಿಟಿಯಲ್ಲಿ ನಡೆದಿದೆ. ಪ್ರದೀಪ್ ಅಂಥೋನಿ ನೃತ್ಯ ನಿರ್ದೇಶನ ಮಾಡಿದ ಈ ಗೀತೆಗೆ ಸಿದ್ದಾಂತ್, ರಚನಮೌರ್ಯ, ಹೊನ್ನವಳ್ಳಿ ಕೃಷ್ಣ, ದಿಲೀಪ್, ದಿನೇಶ್ ಗಾಂಧಿ ಹಾಗೂ ಬಾಂಬೆ ನರ್ತಕಿಯರು ಹೆಜ್ಜೆ ಹಾಕಿದರು.
ಈ ಗೀತೆಯೂ ಸೇರಿದಂತೆ ಒಟ್ಟು ಹದಿನೈದು ದಿನಗಳ ಕಾಲ ರಾಮೋಜಿ ಫ಼ಿಲಂಸಿಟಿಯಲ್ಲಿ ‘ಛತ್ರಪತಿ ಚಿತ್ರದ ಚಿತ್ರೀಕರಣ ನಡೆದಿದೆ. ಸಿದ್ದಾಂತ್, ಪ್ರಿಯದರ್ಶಿನಿ, ಭಾನುಪ್ರಿಯ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಸಿದ್ದಾಂತ್(ಎ.ಕೆ.೫೬) ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರ ಅಪಾರ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಖ್ಯಾತ ನಟಿ ಭಾನುಪ್ರಿಯ ಅಭಿನಯದ ಈ ಚಿತ್ರದಲ್ಲಿ ಬಾಲಿವುಡ್ ನಟ ಸಲ್ಮಾನ್ಖಾನ್ ಸಹೋದರ ಅರ್ಬಾಸ್ಖಾನ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯದರ್ಶಿನಿ, ರಚನಮೌರ್ಯ, ಹೊನ್ನವಳ್ಳಿ ಕೃಷ್ಣ, ದಿಲೀಪ್, ದಿನೇಶ್ ಗಾಂಧಿ, ಕರಿಸುಬ್ಬು, ಮನೋಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಚಿತ್ರದ ನಿರ್ದೇಶಕರೂ ಆಗಿರುವ ದಿನೇಶ್ಗಾಂಧಿ ಎ.ಆರ್.ಬಾಬು ಅವರೊಟ್ಟಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ದಾಸರಿಸೀನು ಛಾಯಾಗ್ರಹಣವಿದೆ. ಎಸ್.ಮನೋಹರ್ ಸಂಕಲನ, ಇಸ್ಮಾಯಿಲ್ ಕಲಾ ನಿರ್ದೇಶನ ಹಾಗೂ ಪ್ರದೀಪ್ ಅಂಥೋನಿ ನೃತ್ಯ ನಿರ್ದೇಶನ ‘ಛತ್ರಪತಿ ಚಿತ್ರಕ್ಕಿದೆ.